Skip to main content

Posts

ಗಾಂಧಿ ಕನ್ನಡಕ ತೆಗೆಯಬಾರದಿತ್ತು By ಆನಂದ ಮಾಲಗಿತ್ತಿಮಠ

ಕಸವನು ಹಸಿ ಒಣವೆಂದು ವಿಂಗಡಿಸಲಾರದವರು ಅದೆಷ್ಟು ಸುಲಭವಾಗಿ ಮನಸ್ಸುಗಳ ವಿಂಗಡಿಸಿಬಿಡುತ್ತಾರೆ ಬಳಸಿ ಡಸ್ಟ ಬಿನ್ ಗೂ ಎಸೆದು ಬಿಡುತ್ತಾರೆ ಕಸಪೊರಕೆಗೂ ಧರ್ಮದ ಅಮಲೇರಿರಬಹುದು ಕೆಲವ ಗುಡಿಸಿ ಕೆಲವ ಪೋಷಿಸಿ ಹೊರಟಿದೆ ಬೀದಿಯಲಿ ಡಸ್ಟಬಿನಗಳೂ ಸದ್ದು ಮಾಡುತಿವೆ ವಿಪರೀತ ಬಹುಶಃ ಚುನಾವಣೆ ಹತ್ತಿರ ಬಂದಿರಬಹುದು  ಹಸಿದ ಮೇಕೆಯೊಂದು ನೇತಾರನ ಕೊರಳ ಮಾಲೆಯ ತಿಂದು ಜೈ ಎನುತಿದೆ  ಉದರ ಹೊರೆದ ಖುಷಿಯಲಿ ನೋಟಿನ ಮೇಲಿರುವ ಗಾಂಧೀ‌ ಕಣ್ಣಲ್ಲಿ  ನೀರು ಜಿನುಗುತ್ತಿದೆ ಬಹುಶಃ ಸುತ್ತಲಿನ ಕಸದ ಕಣವೊಂದು ಬಿದ್ದಿರಬಹುದು ಗಾಂಧಿ ಕನ್ನಡಕ  ತೆಗೆಯಬಾರದಿತ್ತು ಸ್ವಾತಂತ್ರ್ಯದ ಹೆಸರಿನಲ್ಲಿ

ಓಕುಳಿ ಶೃಂಗಾರ ಹನಿಗಳು @ ಆನಂದ ಮಾಲಗಿತ್ತಿಮಠ

ಅವಳು ಕೆನ್ನೆಯ ಪಕಳೆಗಳಿಗೆ ನಾ ಹಚ್ಚಿದ ಬಣ್ಣವನು ತೊಳೆದುಕೊಂಡಳು ಈಗ ತುಟಿಗಳನು ನೋಡಿಕೊಳ್ಳುತ್ತಿದ್ದಾಳೆ ತುಟಿಯಿಂದ ತುಟಿಗೆ ತೀಡಿದ ರಂಗು ಹೋಗುವುದಾರೂ ಹೇಗೆ? *** ಅವಳು ತೊಟ್ಟ ಸೀರೆಯ ಬಣ್ಣಗಳ ಎಣಿಸುತ್ತಾ ಎಳೆಯುವಾಗ ಸಮಯ ಸರಿದಿದ್ದೆ ತಿಳಿಯಲಿಲ್ಲ ಅಷ್ಟರಲ್ಲಿ ಬಣ್ಣದಾಟ ಮುಗಿದು ಕಾಮ ದಹನವಾಗಿತ್ತು *** ನನ್ನ ಬಿಸಿ ಉಸಿರ ಪರಿಮಳ ತೊಟ್ಟು ಅವಳು ಕೆಂಡ ಸಂಪಿಗೆಯಂತಾದಳು ಅವಳ ಕೆಂಬಣ್ಣ ಮುಗಿಲಿಗೆರಚಿ ಬೇಗ ಸಂಜೆಯಾಗಲೆಂದು ಕಾಯುತ್ತಿದ್ದೇನೆ *** ನನ್ನ ನೋಡಿ ಅವಳು ನಾಚಿ ನೀರಾದಳು ಅವಳೊಳಗೆ ಒಲವ ಬಣ್ಣ ಬೆರೆಸಿ ಓಕುಳಿಯಾಡಿದೆ *** ಬಣ್ಣ ಹಚ್ಚಬೇಡ ಬಣ್ಣ ಹಚ್ಚಬೇಡ ಎನುತಲೇ ಮೈಮೇಲೆ ಬಿದ್ದಳು ನಾನು ಬಿಳಿಯ ಬೆಳಕು ಅವಳೊಳಗೆ ತೂರಿ ಹೊರಬಂದೆ ಅವಳ ಮಡಿಲಲ್ಲೀಗ ಪುಟಾಣಿ ಕಾಮನಬಿಲ್ಲು ಆಡುತಿದೆ *** ನನ್ನ ಪ್ರೀತಿಯ ತಿರಸ್ಕರಿಸಿ ನಡೆದ ಅವಳ ಬೆನ್ನ ಮಹಡಿಯಿಂದ ನಾ ಹಚ್ಚಿದ ಕೊನೆಯ ಬಣ್ಣದ ಹನಿಯೊಂದು  ವಿರಹದಿಂದ ನೆಲಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದೆ *** ಕಪ್ಪು ಬಣ್ಣವೆಂದರೆ ಅವಳಿಗೂ ಇಷ್ಟ ಕಣ್ಣಿಗೆ ಕಾಡಿಗೆ ಹಾಕುತ್ತಾಳೆ ನಾನೋ  ಕಪ್ಪು ಹಲಗೆಯ ಮೇಲೆ ಅವಳ ಕಣ್ಣುಗಳನೇ ಬರೆಯುತ್ತೇನೆ ಅವಳ ತಂದೆಗೂ  ಕಪ್ಪೆಂದರೆ ಇಷ್ಟ ನಮ್ಮಿಬ್ಬರ ಒಲವ ಸುಟ್ಟ ಬೂದಿ  ಕಪ್ಪ ಕೇಳುತ್ತಿದ್ದಾನೆ ಹೇಗೆ ಕೊಡಲಿ? *** ಅವಳ ಪ್ರತಿ ಹೆಜ್ಜೆಗಳಿಗೂ ಬಣ್ಣ ತುಂಬುತ್ತಾ ಹೋದೆ ಅವಳದಕೆ ಕನಸುಗಳೆಂದು ಹೆಸರಿಟ್ಟಳು ನನಸಾದ  ಮೇಲೆ ಅವಳು ಸಿಗದಂತೆ ದೂರ ಹೋದಳು ನಡೆ

ತಾಳ ತಪ್ಪಿದ ಸಾಹಿತ್ಯ ಮತ್ತು ಮಕ್ಕಳ ಮೇಲಿನ ಪ್ರಭಾವ @ ಆನಂದ ಮಾಲಗಿತ್ತಿಮಠ

ಸಾಮಾಜಿಕ ಹಿತವನ್ನು ಬಯಸುವುದೇ ಸಾಹಿತ್ಯವಾಗಬೇಕು. ಲೋಕದ ತವಕ ತಲ್ಲಣಗಳನ್ನೆಲ್ಲಾ ಹೊದ್ದು ಹರಿಯುವ ರಸಗಂಗೆಯಾಗಬೇಕು. ಪ್ರಶ್ನಿಸಬೇಕು ಮತ್ತು ಪ್ರಶ್ನೆಗಳಿಗೆ ಉತ್ತರವಾಗಿರಬೇಕು. ಬಿರಿದ ಹೃದಯಗಳನೊಂದುಗೂಡಿಸುವಂತಿರಬೇಕು. ಸೋತವರ ರೆಟ್ಟೆಗಳಿಗೆ ಬಲತುಂಬಿ ಯಶಸ್ಸಿನೆಡೆಗೆ ಕೈ ಹಿಡಿದು ಕರೆದುಕೊಂಡು ಹೋದ ಅದೆಷ್ಟೋ ಸತ್ವಯುತ ಸಾಹಿತ್ಯ ಪುಸ್ತಕದ ಉದರಗಳಲಿ ಮಿಸುಕಾಡುತ್ತಿದೆ. ಸಾಹಿತ್ಯದಲ್ಲಿ ಹಲವು ಪ್ರಕಾರಗಳಿದ್ದರೂ ಜಾನಪದ ಸಾಹಿತ್ಯದಷ್ಟು ಹೃದಯಕ್ಕೆ ಹತ್ತಿರವಾದುದು ಮತ್ತೊಂದಿಲ್ಲ.  ಕೃತಕತೆಯ ಬಣ್ಣಗಳಿಲ್ಲದ ನಿರಾಭರಣ ಸುಂದರಿ ಎಂದರೆ ಅದು ಜನಪದ ಸಾಹಿತ್ಯ. ಆದರೆ ಇತ್ತೀಚಿನ ದಿನಮಾನಗಳಲಿ ಹೊಸ ಸಾಹಿತ್ಯವೊಂದು ಜನ್ಮತಳೆದಿದೆ. ಅದುವೆ ಟ್ರ್ಯಾಕ್ಟರ್ ಸಾಹಿತ್ಯ. ಎತ್ತುಗಳೊಂದಿಗೆ ರೈತನ ಸಾಂಗತ್ಯವಿದ್ದಾಗ ಬೆವರಿನೊಂದಿಗೆ ಹುಟ್ಟಿದ ಪದಗಳು ಲೋಕಕೆ ನೀತಿ ಸಾರುವಂತಿದ್ದವು. ಆದರೆ ಟ್ರ್ಯಾಕ್ಟರ್ ಅರಚುವ ಇಂದಿನ ಹಾಡುಗಳಲ್ಲಿ ಅಶ್ಲೀಲತೆಯ, ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಹಾಡುಗಳ ವಿಜೃಂಭಣೆಯು ಸಾಗಿದೆ. ಇಂತಹ ಹಾಡುಗಳು ಬಲುಬೇಗ ಜನಪ್ರಿಯವಾಗುತ್ತಿರುವುದು ಉಳಿದವರಿಗೆ ಇಂತಹುದೇ ಹಾಡುಗಳನು ಮತ್ತೆ ಮತ್ತೆ ಬರೆದು ಹಾಡುವಂತೆ ಪ್ರೇರೆಪಿಸುತ್ತಿದೆ. ಹದಿಹರೆಯದ ಮಕ್ಕಳಲ್ಲಿ ಇಂತಹ ಸಾಹಿತ್ಯವು ಬೀರುತ್ತಿರುವ ಪರಿಣಾಮ ಗಂಭೀರವಾಗಿದೆ. ಕೋಮಲತೆಯಿಂದ ಅರಳಿ ನಗಬೇಕಾದ ಮಲ್ಲಿಗೆ ಹೂವುಗಳಂತಿರುವ ಮಕ್ಕಳ ಮನಸ್ಸಿನಿಂದ ಮುಗ್ಧತೆಯ ಪರಿಮಳವನ್ನೇ ಕಸಿದು ಹಾಕುತ್ತಿರುವುದು