Skip to main content

Posts

Showing posts from September, 2021

ಗಜಲ್ @ ಆನಂದ ಮಾಲಗಿತ್ತಿಮಠ

ನನಗೂ ದೇವರಿಗೂ ನಡುವೆ ಗೋಡೆ ಕಟ್ಟಿದಿರಿ ಗುಡಿಯ ಹೆಸರಿನಲಿ ಸಾಕಿ ಬಯಲಿನಲ್ಲಿಯೇ ಕೈಮುಗಿದು ಬಯಲಾಗಬಯಸಿದ್ದೆ ಕರ್ಪೂರದ ರೀತಿಯಲಿ ಸಾಕಿ ನನಗಿರುವ ಸ್ವಾತಂತ್ರ್ಯ ನನ್ನ ದೇವನಿಗೇಕಿಲ್ಲ ನರಳಬೇಕೇ‌ ಬಂಧನದಲಿ ಬಂದರೆ ಬರಲಿಬಿಡಿ ನನ್ನೊಂದಿಗೆ ಬಡವನ ಗುಡಿಸಲಿಗೂ ಚೆಂದದಲಿ ಸಾಕಿ ನನ್ನನೇಕೋ ಆಲಿಸನು ಮಂದಾದವೇ ಕರ್ಣಗಳು ಗಂಟೆಯ ಠೇಂಕಾರದಲಿ ಮಂದಾರ್ತಿಯ ಮಂದಾನಿಲಕೆ  ಮಾದೇವ ಸುಂದಾದನೆ  ಓಂಕಾರದಲಿ ಸಾಕಿ ಧನಕನಕಾದಿಗಳಿಗೆ ಗಾಳ ಹಾಕದ ಗರೀಬ್ ನನ್ನು ಗಾಳಿಯಾಗಿಸು ಕರುಣೆಯಲಿ ಎಲ್ಲ ಬಂಧನಗಳ ತೂರಿ ಆ ದೇವನ  ಸ್ಪರ್ಶಿಸಿ ಬರುವೆ ತುಡುಗಿನಲಿ ಸಾಕಿ ಇಂದಲ್ಲ ನಾಳೆ  ನನಗಾಗಿ ದೇವ ಹೊರಬಂದೇ ಬರುವನು ಜನಜಾತ್ರೆಯಲಿ ಗುಡಿಯಿಂದಾಗಲಿ, ಆನಂದನ‌ ದೇಹದಿಂದಾಗಲಿ ಬಲು ಸಂಭ್ರಮದಲಿ ಸಾಕಿ ಈ ಗಜಲ್ ನ್ನೂ ಓದಿ ನಿನ್ನ ಹೆರುವಾಗಲೂ ನನಗಿಷ್ಟು ನೋವಾಗಿರಲಿಲ್ಲ ಕಂದಾ

ಗಜಲ್ @ ಆನಂದ ಮಾಲಗಿತ್ತಿಮಠ

ಗಜಲ್ 2 ********* ನನ್ನ ಮನೆಯ ಹಿತ್ತಲದ ಹೂವು ತತ್ತರಿಸಿ ಹೋಯಿತು ದೊರೆ ಕತ್ತಲಲ್ಲಿ ಕರಾಮತ್ತು ನಡೆದು ಕತ್ತೆತ್ತಿ ತಿರುಗದಂತಾಯಿತು ದೊರೆ ಜೀವ ಬತ್ತಿದಾಗ ಮೇಣದ ಬತ್ತಿ ಹಿಡಿದು ಸಾಂತ್ವನವ ನುಡಿದು ಮಾರು ದೂರು ನಡೆದ ಸಮಾಜ ನಿದ್ದೆಹೋಯಿತು ದೊರೆ ಅಳುವವರ ಕಣ್ಣೀರು ಬತ್ತಿದರೂ‌ ಆಳುವವರು ಕಣ್ತೆರೆಯಲಿಲ್ಲ ಕಾಮದ ಮುಷ್ಠಿಯಲಿ ಕೌಮಾರ್ಯ ಕಮರಿ ಹೋಯಿತು ದೊರೆ ನಡು ಬಜಾರಿನಲ್ಲಿ ಬಡ ಹೆಣ್ಣು ಮಗಳ ಶೀಲ ಬಿಕರಿಯಾಯಿತಂದು ರೂಪಾಯಿಗೊಂದರಂತೆ ಅವಳ ಮಾನ ಖಾಲಿಯಾಯಿತು ದೊರೆ ಭಾವಚಿತ್ರ ಸೇರಿದ ಅವಳೆದುರಿಗೆ ದೀಪ ಇನ್ನೂ ತಣ್ಣಗುರಿಯುತಿದೆ ಬಡಬಾಗ್ನಿಯಾದರೆ ಈ ಜಗದ 'ಆನಂದ'ವೇ ನಂದಿ ಹೋದಿತು ದೊರೆ ಇವುಗಳನ್ನೂ ಓದಿ ಅದೃಷ್ಟವಂತ - ಕತೆ ಸಾನಾಪೂರದ ಸಂಗೀತ ಶಿಲೆಗಳು - ಪ್ರೇಮಕತೆ

ಗಜಲ್ @ ಆನಂದ ಮಾಲಗಿತ್ತಿಮಠ

ನಿನ್ನ ಹೆರುವಾಗಲೂ ನನಗಿಷ್ಟು ನೋವಾಗಿರಲಿಲ್ಲ ಕಂದಾ ಈ ಇಳಿವಯಸ್ಸಲ್ಲಿ ನನ್ನ ತೊರೆದು ದೂರಾದೆಯಲ್ಲ ಕಂದಾ ಮಮತೆಯ ಮುಂದೆ ಮೊಹಬ್ಬತ್ ವಿಜಯದ ನಗೆ ಬೀರಿ ಗಹಗಹಿಸಿ ನಗುತಿರಲು ನನ್ನಳುವಿಗೆ ಕೊರತೆಯಿಲ್ಲ ಕಂದಾ ಅಂದು ಪುಟಾಣಿ ಪಾದಗಳಿಂದ ಎದೆಗೊದೆದು ನಗುತ್ತಿದ್ದೆ ಮುಂದೆಯೂ ಹಾಗೆ ಮಾಡುವೆಯೆಂಬ ಕಲ್ಪನೆಯಿರಲಿಲ್ಲ ಕಂದಾ ನನ್ನೊಡಲ ಹಸಿವ ಕಡೆಗಣಿಸಿ ನಿನಗೆ ತುತ್ತನೀಯುತ್ತಿದ್ದೆ ಈ ಅಮ್ಮನ ಎದೆವಾಲಿನಲ್ಲಿ ಎಂದೂ ವಿಷವಿರಲಿಲ್ಲ ಕಂದಾ ನಾ ನೆಟ್ಟ ಮರ ನೆರಳಾಗಲಿಲ್ಲವೆಂಬ ಕೊರಗಿಹುದೆನೋ ನಿಜ ಸಾಂತ್ವನದ ತಂಪೆರೆಯಲು 'ಆನಂದ'ನ ಪದ್ಯಗಳಿವೆಯಲ್ಲ ಕಂದಾ ಇದೇ ಲೇಖಕರ ಕತೆ ಓದಲು ಕ್ಲಿಕ್ ಮಾಡಿ ಅಪಸ್ವರ ಕತೆ

ಅಪಸ್ವರ ಕತೆ

         ಜಿಟಿ ಜಿಟಿ ಮಳೆಯಲ್ಲಿ ಕೊಡೆ ಹಿಡಿದು ವೀರುಪಾಕ್ಷಯ್ಯ ಗಂಭೀರವಾಗಿ ನಡೆಯುತ್ತಿದ್ದನು. ಹಠಮಾರಿ ಕೊಡೆ ಎಷ್ಟು ಹೇಳಿದರೂ ಅವನ ಮಾತೇ ಕೇಳಲೊಲ್ಲದು. ಅದಕ್ಕೆ ಗಾಳಿಯ ಸಾಥ ಬೇರೆ. ಅವನ ಮುಖದ ಮೇಲೆಲ್ಲ ಹನಿಗಳುದುರುತ್ತಿದ್ದವು, ಮೇಲೆ ನೋಡಿದರೆ ಕೊಡೆಯ ತೂತಿನಿಂದ ಸೋರುತಿರುವ ಮುಗಿಲು ಕಂಡಿತು. ಒಂದೆರಡು ಹನಿಗಳು ಕಣ್ಣೊಳೊಗೆ ಹೊಕ್ಕೆ ಬಿಟ್ಟವು. ಕಣ್ಣುಜ್ಜಿಕೊಂಡ, ಕೆಂಪಗಾದವು. ಒಂದೊಳ್ಳೆ ಕೊಡೆ ತುಗೋಬಾರದಾ? ಅಂತ ಹೋದ ವರುಷಾನೇ ಹೆಂಡತಿ ಹೇಳಿದ ಮಾತುಗಳು ನೆನಪಾದವು‌. ಆದರೆ ರಿಟೈರ್ಡ್ ಆದ ಜೀವನ, ಬರೋ ಎರಡೂವರೆ ಸಾವಿರ ಪಿಂಚಣಿಯಲ್ಲಿಯೇ ಜೀವನ ಸಾಗಿಸಬೇಕಲ್ಲ ಎಂದುಕೊಳ್ಳುತ್ತಾ ನಡೆಯುತ್ತಿರಬೇಕಾದರೆ ಕಾಲಿನ ಚಪ್ಪಲಿಯ ಉಂಗುಟ ಕಿತ್ತು, ಚಪ್ಪಲಿ ಕಾಲಿನಿಂದ ಕೊಸರಿಕೊಂಡಿತು. ಥೂ! ಇದೊಂದು ಈಗಲೇ ಕೀಳಬೇಕಾ? ಎನ್ನುತ್ತಾ ಚಪ್ಪಲಿಯನ್ನು ತಿರುಗಿಸಿ ನೋಡಿದ, ಉಂಗುಟಕ್ಕೆ ಹಾಕಿದ ಪಿನ್ನು ಬಾಯಿ ಬಿಚ್ಚಿಕೊಂಡಿತ್ತು. ಒತ್ತಿ ಸರಿಮಾಡಿ ಮತ್ತೆ ನಡೆಯತೊಡಗಿದ.  ತೊಯ್ದು ಒದ್ದೆಯಾಗಿ ಬಂದ ಗಂಡನಿಗೆ ತಲೆ ಒರೆಸಿಕೊಳ್ಳಲು ವಸ್ತ್ರ ನೀಡಿ ಒಳಹೋದ ಶಾಂತಾ ಬಿಸಿ ಬಿಸಿ ಚಹಾ ಮಾಡಿದಳು. ಮೂಲೆಯಲ್ಲಿ ಮುದುರಿಕೊಂಡು ಕುಳಿತ ಕಬ್ಬಿಣದ ಕುರ್ಚಿಯನ್ನು ಬಿಡಿಸುವಾಗ ಚೊಂಯಕ್ ಎಂದು ಕೂಗುತ್ತಾ ಅರಳಿತು. ಅದರ ಮೇಲೆ ಉಸ್ಸೆಂದು ಕುಳಿತು ಚಹಾ ಹೀರುತ್ತಾ ಧೋ ಎಂದು ಹುಚ್ಚೆದ್ದು ಸುರಿಯುತ್ತಿದ್ದ ಮಳೆಯನ್ನು ಕಿಟಕಿಯಿಂದಲೆ ನೋಡುತೊಡಗಿದ. ರೀ ಹೋದ ಕೆಲಸ ಏನಾಯಿತೆಂ