Skip to main content

ತಾಳ ತಪ್ಪಿದ ಸಾಹಿತ್ಯ ಮತ್ತು ಮಕ್ಕಳ ಮೇಲಿನ ಪ್ರಭಾವ @ ಆನಂದ ಮಾಲಗಿತ್ತಿಮಠ



ಸಾಮಾಜಿಕ ಹಿತವನ್ನು ಬಯಸುವುದೇ ಸಾಹಿತ್ಯವಾಗಬೇಕು. ಲೋಕದ ತವಕ ತಲ್ಲಣಗಳನ್ನೆಲ್ಲಾ ಹೊದ್ದು ಹರಿಯುವ ರಸಗಂಗೆಯಾಗಬೇಕು. ಪ್ರಶ್ನಿಸಬೇಕು ಮತ್ತು ಪ್ರಶ್ನೆಗಳಿಗೆ ಉತ್ತರವಾಗಿರಬೇಕು. ಬಿರಿದ ಹೃದಯಗಳನೊಂದುಗೂಡಿಸುವಂತಿರಬೇಕು. ಸೋತವರ ರೆಟ್ಟೆಗಳಿಗೆ ಬಲತುಂಬಿ ಯಶಸ್ಸಿನೆಡೆಗೆ ಕೈ ಹಿಡಿದು ಕರೆದುಕೊಂಡು ಹೋದ ಅದೆಷ್ಟೋ ಸತ್ವಯುತ ಸಾಹಿತ್ಯ ಪುಸ್ತಕದ ಉದರಗಳಲಿ ಮಿಸುಕಾಡುತ್ತಿದೆ. ಸಾಹಿತ್ಯದಲ್ಲಿ ಹಲವು ಪ್ರಕಾರಗಳಿದ್ದರೂ ಜಾನಪದ ಸಾಹಿತ್ಯದಷ್ಟು ಹೃದಯಕ್ಕೆ ಹತ್ತಿರವಾದುದು ಮತ್ತೊಂದಿಲ್ಲ. 
ಕೃತಕತೆಯ ಬಣ್ಣಗಳಿಲ್ಲದ ನಿರಾಭರಣ ಸುಂದರಿ ಎಂದರೆ ಅದು ಜನಪದ ಸಾಹಿತ್ಯ.
ಆದರೆ ಇತ್ತೀಚಿನ ದಿನಮಾನಗಳಲಿ ಹೊಸ ಸಾಹಿತ್ಯವೊಂದು ಜನ್ಮತಳೆದಿದೆ. ಅದುವೆ ಟ್ರ್ಯಾಕ್ಟರ್ ಸಾಹಿತ್ಯ. ಎತ್ತುಗಳೊಂದಿಗೆ ರೈತನ ಸಾಂಗತ್ಯವಿದ್ದಾಗ ಬೆವರಿನೊಂದಿಗೆ ಹುಟ್ಟಿದ ಪದಗಳು ಲೋಕಕೆ ನೀತಿ ಸಾರುವಂತಿದ್ದವು. ಆದರೆ ಟ್ರ್ಯಾಕ್ಟರ್ ಅರಚುವ ಇಂದಿನ ಹಾಡುಗಳಲ್ಲಿ ಅಶ್ಲೀಲತೆಯ, ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಹಾಡುಗಳ ವಿಜೃಂಭಣೆಯು ಸಾಗಿದೆ.
ಇಂತಹ ಹಾಡುಗಳು ಬಲುಬೇಗ ಜನಪ್ರಿಯವಾಗುತ್ತಿರುವುದು ಉಳಿದವರಿಗೆ ಇಂತಹುದೇ ಹಾಡುಗಳನು ಮತ್ತೆ ಮತ್ತೆ ಬರೆದು ಹಾಡುವಂತೆ ಪ್ರೇರೆಪಿಸುತ್ತಿದೆ.
ಹದಿಹರೆಯದ ಮಕ್ಕಳಲ್ಲಿ ಇಂತಹ ಸಾಹಿತ್ಯವು ಬೀರುತ್ತಿರುವ ಪರಿಣಾಮ ಗಂಭೀರವಾಗಿದೆ. ಕೋಮಲತೆಯಿಂದ ಅರಳಿ ನಗಬೇಕಾದ ಮಲ್ಲಿಗೆ ಹೂವುಗಳಂತಿರುವ ಮಕ್ಕಳ ಮನಸ್ಸಿನಿಂದ ಮುಗ್ಧತೆಯ ಪರಿಮಳವನ್ನೇ ಕಸಿದು ಹಾಕುತ್ತಿರುವುದು ವಿಪರ್ಯಾಸವೆನಿಸಿದೆ. ಪ್ರೀತಿ ಪ್ರೇಮ ಪ್ರಣಯದತ್ತ ಅಕಾಲಿಕವಾಗಿ ಆಕರ್ಷಿತರಾಗಿ ತಮ್ಮ ಬಂಗಾರದಂತಹ ಬದುಕನ್ನು ಬೆಂಕಿಗೆ ದೂಡುತ್ತಿದ್ದಾರೆ. ಇಂತಹ ಟ್ರ್ಯಾಕ್ಟರ್ ಸಾಹಿತ್ಯಗಳಲ್ಲಿ ಕಾಲೇಜು ಹುಡುಗಿ ಹಾಗೂ ಹೈಸ್ಕೂಲ್ ಹುಡುಗಿಯರನ್ನೇ ಕೇಂದ್ರಿಕರಿಸಿದ ಹಾಡುಗಳಿದ್ದು ಶಿಕ್ಷಣಕ್ಕೆ ಮೀಸಲಾದ ವಯೋಮಾನದಲ್ಲಿ ಅವರ ಮನಸನ್ನು ಬೇರೆಯ ವಿಷಯಗಳತ್ತ ಸೆಳೆಯುತ್ತಿವೆ.
ಇತ್ತೀಚಿಗೆ ಬಿಡುಗಡೆಯಾದ ಒಂದು ಹಾಡಿನ ಸಾಲುಗಳನ್ನು ಪ್ರಾಥಮಿಕ ಶಾಲಾ ಮಕ್ಕಳು ಗುನುಗುತ್ತಿದ್ದರು. ಅದರಲ್ಲಿ ಹೀಗೆ ಹೇಳಲಾಗಿದೆ...ಮದುವೆಗೆ ಮುಂಚೆ ಮಕ್ಕಳಾಗಬೇಕು ಅಂತೆ. ಇಂತಹ ಸಾಲುಗಳ ಸಾಹಿತ್ಯಕ್ಕೆ ಹೆಸರಾಂತ ನಟನಟಿಯರ ನೃತ್ಯ ಬೇರೆ. ಇವೆಲ್ಲವುಗಳಲ್ಲಿ ಸಮಾಜದ ಸ್ವಾಸ್ಥ್ಯವನ್ನು ಸುಧಾರಿಸುವ ಒಂದಿನಿತೂ ಉದ್ದೇಶವಿದ್ದಂತಿಲ್ಲ. ಕೌಟುಂಬಿಕ ವ್ಯವಸ್ಥೆಗಳು ಈಗಾಗಲೇ ಒಡೆದು ಚೂರಾಗುತ್ತಿವೆ. ಅನೈತಿಕತೆಯು ವಿಷವಾಗಿ ಒಳನುಸುಳುತ್ತಿದೆ. ಇಂತಹ ಸಂಧರ್ಭಗಳಲ್ಲಿ ಮತ್ತಷ್ಟು ಛಿದ್ರಗೊಳಿಸುವ ವಿನಾಶಕಾರಿ ಮನಸ್ಥಿತಿಯಿಂದ ಹೊರಬರುವ ಇಂತಹ ಸಾಹಿತ್ಯಗಳನ್ನು ರಚಿಸುವುದು ಹೇಗೆ ಅಪರಾಧವೋ ಹಾಗೆ ಅವುಗಳನ್ನು ಮೆರೆಸುವುದೂ ಅಷ್ಟೇ ಅಪರಾಧವೆಂಬುವುದನ್ನು ಅರಿಯಬೇಕು. 
ಯುವಕ ಯುವತಿಯರಿಗಾಗಿ ರಚಿಸುವ ಸಾಹಿತ್ಯವು ಸದ್ದಿಲ್ಲದೇ ಮಕ್ಕಳನ್ನೂ ಅಶ್ಲೀಲತೆಯ ಲೋಕದತ್ತ ಕರೆದೊಯ್ಯುತ್ತಿರುವುದು ತುಂಬ ಕಳವಳಕಾರಿಯಾಗಿದೆ. ಮಕ್ಕಳ ನೈತಿಕ ಮಟ್ಟ ಕುಸಿತಕ್ಕೆ ಶಿಕ್ಷಣ ವ್ಯವಸ್ಥೆಯೇ ಕಾರಣವೆಂದು ಬೆರಳು ತೋರುವ ಮುನ್ನ ನಮಗೆಲ್ಲ ಸಾಮಾಜಿಕ ನೈತಿಕತೆಯನ್ನು ಪಾಲಿಸುವುದರ ಅರಿವಿರಬೇಕು. ಇನ್ನಾದರೂ ಇಂತಹ ಸಾಹಿತ್ಯಗಳನ್ನು ಟ್ರ್ಯಾಕ್ಟರ್ ನಲ್ಲಿ ಹಾಕಿ ಒದರಿಸುವ ಮುನ್ನ ಪುಟಾಣಿ ಮಕ್ಕಳಿವೆ ಎಂಬುವುದು ಗಮನವಿರಲಿ...

                                     ಆನಂದ ಮಾಲಗಿತ್ತಿಮಠ
                                   ಸಾಹಿತಿಗಳು ಬೈಲಹೊಂಗಲ

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ